ಸಮತಾವಾದ

ಭೂಮಿಯ ಒಡೆತನ
ಒಬ್ಬನಿಗಾಗಲು
ಬಾಳಿನ ಬೇಗುದಿ ಒಬ್ಬನಿಗೆ
ಐಸಿರಿಯೊಬ್ಬಗೆ
ಶರಣಾಗಲು ಇಹ
ಲೋಕವೆ ಅಸಮತೆ ಬೀಡಹುದು.

ರಾಜನ ಸಂಪದ
ಸಿರಿವಂತನ ಗೆಲು
ನೋಡುತ ಸಾಸಿರ ಜನವೃಂದ
ಬೆರಗಲಿ ಕುಳಿತೂ
ತಮ್ಮಯ ಪಾಡನು
ನುಂಗುತ ಕರಗುತ ಕಳೆಯುತ್ತ.

ಸಾಹಸ ಬಾಳಿಗೆ
ದೈವಿಕ ಸುಖಕೆ
ಪಾತ್ರರು ಅಲ್ಲವೆ ಜನಕೋಟಿ?
ಕಲ್ಪಿತ ವ್ಯಸನಕೆ
ಮಾಡಿದ ಕರ್ಮಕೆ
ಅಂತ್ಯವು ಇಲ್ಲವೆ ಈ ಜಗದಿ?

ಋತುಗಳು, ಕಾಲವು
ಸೂರ್ಯನು, ಚಂದ್ರನು,
ಪ್ರಕೃತಿಯೆಲ್ಲವು ಸಮವಾಗಿ
ಕ್ರಿಮಿಯಿಂದೊಡಗಿದ
ವಿಶ್ವ ಸರ್‍ವಸ್ವಕೆ
ಒದಗಿದ ಸುಖವನು ಕ್ರಮವಾಗಿ-

ಈಯಲು ಮಾನವ-
ಗಣದಲಿ ಬಹುವಿಧ
ಏತಕೊ ಬಂದಿತು-ಎಲ್ಲಿಂದ?
ಅಸಮಾಧಾನದ
ಮನಸನು ಕೊರೆಯುವ
ಕೀಟವೆ ಇಂದಿನ ಈ ಭೇದ.

ಜನ ಸಮಾಜದಿ
ರಾಜನು ಋಷಿಗಳು
ರಕ್ಕಸ ಬಲ್ಲಿದ ಬಡವನೆಂದು
ರೂಪಿಗೆ ವರ್ಣಕೆ
ಹೋಲುವ ಸ್ಥಿತಿಯಲಿ
ಕೋಟ್ಯಾದಿ ವಿಧ ಜೀವನವು.

ರಷ್ಯಾದೇಶದ
ಭೀಕರ ಕ್ರಾಂತಿಯು
ಫ್ರಾನ್ಸಿನ ವಿಪ್ಲವದಾ ಪರಿಯ
ಹೆಬ್ಬುಲಿ ತನ್ನಯ
ಪ್ರಾಣಕೆ ಹಾರುವ
ತೆರವಿದೊ ಜೀವನದತೃಪ್ತಿ.

ದೇಶದ ಋಣವನು
ರಾಜನ ಹೊಟ್ಟೆಲಿ;
ಕಾಡದು ಬೇಡನ ಬಲೆಯಲ್ಲಿ.
ಬಡವನ ಕೈಗಳು
ಧನಿಕನ ಜೇಬಲಿ
ಕಾಳ್ಗಳು ಹೆಗ್ಗಣ ಬಿಲದಲ್ಲಿ.

ಸುಭಿಕ್ಷಾವಾದವ-
ದಿಲ್ಲದೆ ಲೋಕವು
ಅನ್ನದ ಸಮರವೆ-ಅನ್ಯಾಯ!
ಮಣ್ಣಿನ ಪಾಪವು
ಬ್ರಹ್ಮನ ನೀತಿಯು
ಸುಟ್ಟಂತಾಯಿತು ಈ ಇರವು.

ಹೇಳುವ ನೀತಿಗೆ
ಬಾಯಲಿ ಸ್ಥಾನವು
ಮಿನುಗುವ ಒಡವೆಗೆ ಬೆಲೆಯಿಲ್ಲ!
ಹೊನ್ನು ಹಣಗಳ
ಮೋಹಿಸಿ ನರಳದಿ-
ರೆನ್ನುವ ಹಾಡಿಗೆ ತಾಳವಿಲ್ಲ.

ಸಮತಾವಾದದ
ಕ್ರಾಂತಿಗೆ ಶರಣಾ-
ಗುವೆನಿದೊ ಮನ್ನಿಸಿ ಧರ್ಮವನು.
ಸಮತಾ ಭಾವವು
ಸಮಗುಣ ಐಕ್ಯವು
ಸರ್ವಜನ ಸುಖ ಬೆಳಗಲಿದೊ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೨
Next post ಬೆಳೆಗಿನ ತೋಟದಲ್ಲಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys